ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಪ್ರತಿಭಟನೆ ಕುರಿತು ಪತ್ರಿಕಾಗೋಷ್ಠಿ | ಜನತಾ ನ್ಯೂಸ್
ಬೆಂಗಳೂರು : 18 ತಿಂಗಳ ತುಟ್ಟಿಭತ್ಯೆ ಬಿಡುಗಡೆ, ಎಲ್ಲರಿಗೂ ಉಚಿತ ವ್ಯಾಕ್ಸೀನ್, ಎನ್.ಪಿ.ಎಸ್ ರದ್ದುಗೊಳಿಸಿ ನಿಶ್ಚಿತ ಪಿಂಚಣಿ ವ್ಯವಸ್ಥೆ, ಖಾಲಿ ಹುದ್ದೆಗಳ ಭರ್ತಿ ಇತರೆ ಬೇಡಿಕೆಗಳಿಗಾಗಿ ಒತ್ತಾಯಿಸಿ ರಾಷ್ಟ್ರ ಮಟ್ಟದ ಪ್ರತಿಭಟನಾ ದಿನಾಚರಣೆ ದಿನಾಂಕ: 15.07.2021, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಪ್ರತಿಭಟನೆ ನಡೆಸಲು ಕರೆ ನೀಡಿದೆ, ಎಂದು ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಒಕ್ಕೂಟದ ಪಧಾದಿಕಾರಿಗಳು ತಿಳಿಸಿದ್ದಾರೆ.
ದೇಶದಾದ್ಯಂತ ಕೋವಿಡ್-19 ರೋಗಾಣು ಹರಡುವಿಕೆಯ ಎರಡನೇ ಅಲೆಯಲ್ಲಿ ಲಕ್ಷಾಂತರ ಜನರು ಸಾವನ್ನಪಿದ್ದಾರೆ. ಕರ್ನಾಟಕದಲ್ಲಿ ಕೂಡ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಅನೇಕ ಫ್ರಂಟ್ ಲೈನ್ ಕೆಲಸಗಾರರು, ನೌಕರರು ಮತ್ತು ಶಿಕ್ಷಕರು ಈ ಖಾಯಿಲೆಗೆ ತುತ್ತಾಗಿದ್ದಾರೆ.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ಅನೇಕ ವರ್ಷಗಳಿಂದ ಹುದ್ದೆಗಳ ಕಡಿತ, ಹುದ್ದೆಗಳ ರದ್ಧತಿ ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು, ಇಲಾಖೆಯ ಕೆಲಸ ಕಾರ್ಯಗಳನ್ನು ಖಾಸಗಿಯವರಿಗೆ ವಹಿಸುವುದು, ನಡೆದೇ ಇದೆ. ಇಂತಹ ಆಘಾತಕಾರಿ ಆಡಳಿತ ಸುಧಾರಣೆ ಹಾಗೂ ವೆಚ್ಚಗಳ ಕಡಿತದ ನೀತಿಯಿಂದಾಗಿ ಇಂದು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2.80ಲಕ್ಷ ಹುದ್ದೆಗಳು ಖಾಲಿ ಇಡಲಾಗಿದೆ. ಇಂದು ಒಟ್ಟು ಸುಮಾರು 60 ಲಕ್ಷಗಳಷ್ಟು ಸರ್ಕಾರಿ ಹುದ್ದೆಗಳು ದೇಶಾದ್ಯಂತ ಖಾಲಿ ಇವೆ ಎಂದು ಅಂದಾಜಿಸಲಾಗಿದೆ. ಸೇವೆಗಳ ಖಾಸಗೀಕರಣ ಇನ್ನಷ್ಟು ತೀವ್ರಗೊಳಿಸಲು ಈಗ 2ನೇ ಆಡಳಿತ ಸುಧಾರಣಾ ಆಯೋಗವನ್ನು ನಿವೃತ್ತ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿದೆ.
ಈಗಾಗಲೇ 2006ರ ನಂತರ ನೇಮಕಾತಿ ಹೊಂದಿದ ಖಾಯಂ ನೌಕರರ ಪಿಂಚಣಿ ಖಾಸಗೀಕರಣವಾಗಿದ್ದು, ನಿಶ್ಚಿತ ಪಿಂಚಣಿಯನ್ನು ಕಳೆದುಕೊಂಡಿದ್ದಾರೆ. ಜೂಜಾಟದ ಶೇರು ಮಾರುಕಟ್ಟೆಯ ಅವಲಂಬಿತ ಪಿಂಚಣಿ, ಅನಿಶ್ಚಿತ ಹಾಗೂ ಅಪೂರ್ಣವಾಗಿರುವುದನ್ನು ನಾವು ಈಗಾಗಲೇ ಕಾಣುತ್ತಿದ್ದೇವೆ. ಈಗಾಗಲೇ ಕೆಲವು ಓPS ನೌಕರರು ನಿವೃತ್ತರಾಗಿದ್ದು, ಅವರಿಗೆ ರೂ. 600 ರಿಂದ ರೂ.2,000 ದವರೆಗೆ ಪಿಂಚಣಿ ದೊರೆಯುತ್ತಿದೆ. ಇನ್ನು ಕೆಲವು ಮೃತರ ಕುಟುಂಬಗಳಿಗೆ ಕುಟುಂಬ ಪಿಂಚಣಿ ಇಲ್ಲವೇ ಇಲ್ಲ. ಇದರಿಂದಾಗಿ ಅನೇಕ ನಿವೃತ್ತ ನೌಕರರು ಹಾಗೂ ಕುಟುಂಬಗಳು ಬೀದಿಗೆ ಬಿದ್ದಿವೆ.
ಸರ್ಕಾರವೇ ಮನಸೋ ಇಚ್ಚೆಯಂತೆ ನೌಕರರ ತುಟ್ಟಿ ಭತ್ಯೆಯನ್ನು ದಿನಾಂಕ:01.01.2020 ರಿಂದ 30.06.2021 ರವರೆಗಿನ 18 ತಿಂಗಳ ತುಟ್ಟಿ ಭತ್ಯೆಯನ್ನು ಹಿಡಿದು ಮುಟ್ಟುಗೋಲು ಹಾಕಿಕೊಂಡಿವೆ.
ಇತ್ತೀಚಿನ ದಿನಗಳಲ್ಲಿ ನೌಕರರ ಕೆ.ಸಿ.ಎಸ್.ಆರ್, ನಡತೆ ನಿಯಮಗಳನ್ನು ತಿದ್ದುಪಡಿ ಮಾಡಿ ಅವರ ಎಲ್ಲ ಪ್ರಜಾಪ್ರಭುತ್ವ ಹಕ್ಕುಗಳನ್ನು ಮೊಟಕುಗೊಳಿಸಿದ್ದಲ್ಲದೇ ಇತ್ತೀಚೆಗೆ ಕೇಂದ್ರ ಸರ್ಕಾರ ಹಾಲಿ ನೌಕರರ ದಕ್ಷತೆಯ ನೆಪದಲ್ಲಿ ನೌಕರರನ್ನು 50 ವರ್ಷಗಳ ವಯಸ್ಸಿನ ನಂತರ ಅವರ ದಕ್ಷತೆಯ ಅನುಗುಣವಾಗಿ, ಅವರಿಗೆ ಕಡ್ಡಾಯ ನಿವೃತ್ತಿ ಮಾಡುವ ಬಗ್ಗೆ ಅಧಿಕೃತ ಜ್ಞಾಪನ ಹೊರಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕರೆಯ ಮೇರೆಗೆ ದಿನಾಂಕ:15.07.2021 ರಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಊಟದ ವಿರಾಮದಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ.